ಹಾಸನದಿಂದ ದಕ್ಷಿಣಕ್ಕೆ 23 ಕಿ.ಮೀ ದೂರದಲ್ಲಿರುವ ಹಾಸನ ಅರಕಲಗೂಡು ರಸ್ತೆಯಲ್ಲಿರುವ ಗೊರೂರು ಶ್ರೀ ಯೋಗಾನರಸಿಂಹಸ್ವಾಮಿ ಸನ್ನಿದಿಯಲ್ಲಿದೆ.
ಅಂದಕ್ಕೆ ಅರಕಲಗೂಡು ಚೆಂದಕ್ಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು | ಬೀದಿಯ
ಹದಿನಾರು ತೇರು ಹರಿದಾವೆ ||
ಎಂದು ಜಾನಪದರು ಹೇಳುತ್ತರೆ. ಶಿಲ್ಪಕಲೆಯ ತವರು, ಶಾಸನಗಳ ಬೀಡು, ಸಂಸ್ಕೃತಿಕ ನಾಗರಿ, ವನಸೀರಿಯ ನಾಡು, ಜೈನರ ಕಾಶಿ ಎಂದು ಹೆಸರು ಪಡೆದಿರುವ ಹಾಸನ ಜಿಲ್ಲೆಯಲ್ಲಿ ಹೇಮಾವತಿ ಜಲಾಶಯ ಯೋಜನೆಯಿಂದಾಗಿ ಪ್ರವಾಸಿ ಕೇಂದ್ರ ಬಿಂದುವಾಗಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿರುವ ಗೊರೂರು ಐತಿಹ್ಯ ಸ್ಥಳವಾಗಿದೆ.
ಕ್ರಿ.ಶ.1568ರಲ್ಲಿ ಅರಕಲಗೂಡಿನ ಐಗೂರು ಪಾಳೆಗಾರನಾದ ಕೃಷ್ಣಪ್ಪನಾಯಕನು ಹೇಮಾವತಿ ನದಿಯಲ್ಲಿ ಸ್ನಾನ ಮಾಡಲು ಆಗಮಿಸಿದಾಗ, ಈ ಸ್ಥಳದಲ್ಲಿಬ್ಬರು ಅಣ್ಣ ತಮ್ಮಂದಿರು ಉದ್ಭವಗೊಂಡ ನರಸಿಂಹಮೂರ್ತಿಯನ್ನು ಪೂಜಿಸುತ್ತಿರುವುದು ಕೃಷ್ಣಪ್ಪನಾಯಕನಿಗೆ ತಿಳಿಸುತ್ತರೆ. ಆ ಅಣ್ಣ ತಮ್ಮಂದಿರ ಇಚ್ಛೆಯಂತೆ ನರಸಿಂಹ ದೀಕ್ಷೆಯನ್ನು ತೆಗೆದುಕೊಂಡು ನರಸಿಂಹಸ್ವಾಮಿಗೆ ಗರ್ಭಗುಡಿಯನ್ನು ನಿರ್ಮಿಸಿದ. ಈ ಒಂದು ಸ್ಥಳದಲ್ಲಿ ಗೋಕರ್ಣ ಋಷಿಗಳು ತಪಸ್ಸುಮಾಡಿದರಿಂದ ಕೃಷ್ಣಪ್ಪನಾಯಕನ ಇಚ್ಛೆಯಂತೆ ಇಲ್ಲಿಗೆ ಗೋಕರ್ಣ ನಗರವೆಂದು ಹೆಸರನ್ನು ನಾಮಕರಣ ಮಾಡಿದವೆಂದು ಡಾ|| ಗೊರೂರು ರಾಮಸ್ವಾಮಿ ಅಯ್ಯಂಗಾರವರ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ಮಹಿಮೆ ಮತ್ತು ಚರಿತ್ರೆ ಎಂಬ ಕೃತಿಯಿಂದ ತಿಳಿದುಬರುತ್ತದೆ.
ಕ್ರಿ.ಶ.1166ರ ಮಾವಿನಕೆರೆ ದಾನ ಶಾಸನದಲ್ಲಿ ವಿಜಯೊದಿತ್ಯ ಹೆಗ್ಗಡೆಯ ಸ್ಮರಣಾರ್ಥವಾಗಿ ವಿಜಯಾದಿತ್ಯಪುರ ವೆಂದು ಹಾಸನ ಶಾಸನ ಸಂಖ್ಯೆ 182ರಲ್ಲಿ ಚನ್ನಕೇಶವಪುರ ಎಂದು ಕರೆಯಲಾಗಿತ್ತು ಹೊಯ್ಯಳರ ಕಾಲದಲ್ಲಿ ಅಗ್ರಹಾರವಾಗಿತ್ತೆಂದು ಮೈಸೂರು ಗೆಝಟೀಯರ್ನಲ್ಲಿ ತಿಳಿಸುತ್ತದೆ.

2011ರ ಜನಗಣತಿಯ ಪ್ರಕಾರ 390 ಹೆಕ್ಟೆರ್ ವಿಸ್ತೀರ್ಣವುಳ್ಳ ಗೊರೂರು ಗ್ರಾಮದಲ್ಲಿ ಒಟ್ಟು 1073 ಮನೆಗಳಿಂದ ಕೂಡಿದ್ದು. ಒಟ್ಟು 4284 ಜನಸಂಖ್ಯೆವಿದ್ದು ಈ ಪೈಕಿ ಗಂಡಸರು 2124 ಹಾಗೂ ಹೆಂಗಸರು 2160 ಜನವಿರುವರು ಹಾಗೂ ಲಿಂಗಾನುಪಾತ 963 ಇದೆ. ಪ್ರತಿ ಚದುರ ಕಿಲೋ ಮೀಟರ್ಗೆ ಒಟ್ಟು ಜನಸಾಂದ್ರತೆ 11 ಇದೆ. ಒಟ್ಟಾರೆ ಒಟ್ಟು ಸಾಕ್ಷರತೆಯ ಪ್ರಮಾಣ 75% ಇದ್ದು ಈ ಪೈಕಿ ಗಂಡಸರು 64% ಹಾಗೂ ಹೆಂಗಸರೂ 67% ಇದ್ದರೆ. ಪರಿಶಿಷ್ಟ ಜಾತಿಯಲ್ಲಿ ಒಟ್ಟು 1492 ಜನರಿದ್ದು ಇದರಲ್ಲಿ ಗಂಡಸರು 754 ಹಾಗೂ ಮಹಿಳೆಯರು 738 ಸಂಖ್ಯೆಯಲ್ಲಿರುವರು. ಜೋತೆಗೆ ಪರಿಶಿಷ್ಟ ಪಂಗಡದಲ್ಲಿ 60 ಜನಸಂಖ್ಯೆವಿದ್ದು ಈ ಪೈಕಿ 25 ಮಹಿಳೆಯರು ಹಾಗೂ 35 ಗಂಡಸರಿವರು. 6ವರ್ಷದೊಳಗಿನ ಒಟ್ಟು ಮಕ್ಕಳುಗಳ ಸಂಖ್ಯೆ 372 ವಾಗಿದ್ದು. ಈ ಪೈಕಿ ಗಂಡು 200 ಮತ್ತು 172 ಹೆಣ್ಣುಮಕ್ಕಳಾಗಿದ್ದರೆ.
ಹಾಸನ ಜಿಲ್ಲೆಯ ಜೀವನಾಡಿ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲೊಂದಾದ ಹೇಮಾವತಿ ಜಲಾಶಯ ಗೊರೂರು ಗ್ರಾಮದ ಪ್ರವಾಸಿಗಾರ ಆಕರ್ಶಣೆಯ ಕೇಂದ್ರವಾಗಿದೆ. 1983ರಲ್ಲಿ ನಿರ್ಮಾಣವಾದ ಹೇಮಾವತಿ ಜಲಾಶಯ ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಜೀವನಾಡಿಯಾಗಿದೆ.
ಹೇಮಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಎಂಬಲ್ಲಿ ಸಮುದ್ರದ ಮಟ್ಟದಿಂದ 1219 ಮೀ ಎತ್ತರದಲ್ಲಿ ಉಗಮಿಸಿ ಆಗ್ನೇಯದ ಕಡೇ ಹರಿದು ಸಕಲೇಶಪುರ ತಾಲ್ಲೂಕಿನ ಅಚ್ಚನಹಳ್ಳಿ ಎಂಬ ಹಳ್ಳಿಯ ಬಳಿ ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಪಶ್ಚಿಮ ಕಡೆಯಿಂದ ಹರಿದು ಬರುವ ಕೇಲವು ಹೊಳೆಗಳನ್ನು ಸೇರಿಸಿಕೊಂಡು ಬೇಲೂರಿನಲ್ಲಿ ಹರಿದು ಹಾಸನ ತಾಲ್ಲೂಕನ್ನು ಪ್ರವೇಶಿಸಿ ಉತ್ತರ ಕಡೆಯಿಂದ ಯಗಚಿ ನದಿಯನ್ನು ಸೇರಿಸಿಕೊಂಡು ಹೊಳೇನರಸಿಪುರವನ್ನು ಸುತ್ತಿ ದಕ್ಷಿಣಕ್ಕೆ ಪ್ರವಹಿಸಿ ಕೃಷ್ಣರಾಜಸಾಗರದ ಬಳಿ ಕಾವೇರಿಯನ್ನು ಸೇರಿಕೊಳ್ಳುತ್ತದೆ. ಇದರ ಜಲಾನಯನದ ವಿಸ್ತೀರ್ಣ ಸುಮಾರು 5410 ಚದರ ಕಿಲೋ ಮೀಟರ್ ಆಗಿದೆ ಈ ನದಿಯ ಅಂದಾಜು ಉದ್ದ 245 ಕಿ.ಮೀಗಳು. ಹೇಮಾವತಿ ನದಿಯ ಉದ್ದಕ್ಕೂ ಮಳೆಯ ಪ್ರಮಾಣ ಸಾಮನ್ಯವಾಗಿ 200 ಸೆಂ.ಮೀ ನಿಂದ 70 ಸೆಂ.ಮೀ ವರೆಗೂ ವ್ಯತ್ಯಾವಾಗುತ್ತದೆ. ಒಟ್ಟಿನಲ್ಲಿ ಹೇಮಾವತಿಯು ಸುಮಾರು 113 ಮೈಲಿಗಳಷ್ಟು ಹಾಸನ ಜಿಲ್ಲೆಯೊಳಗೆ ತನ್ನ ಪಾತ್ರವನ್ನು ಹೊಂದಿದ್ದಾಳೆ.
ಹೇಮ ಎಂದರೆ ಚಿನ್ನ. ಹೇಮವಾತಿ ಎಂದರೆ ಚಿನ್ನದ ಹೊಳೆ ಅಥವಾ ಹೊನ್ನಿನ ಹೊಳೆ ಎಂದು ಅರ್ಥ ಜೋತೆಗೆ ಎಣ್ಣೆಹೊಳೆ ಎಂದು ಸಹ ಅರ್ಥವಿದೆ. ಹೇಮಾವತಿಯೆಂದರೆ ದಾಕ್ಷಾಯಿಣಿ ಎಂದು ಸಹ ಅರ್ಥವಿದೆ. ದಕ್ಷಬ್ರಹ್ಮನ ಮಗಳಾದ ಈಶ್ವರನ ಪತ್ನಿ ಪಾರ್ವತಿ ದೇವಿಯ ತಂದೆ ದಕ್ಷಬ್ರಹ್ಮ ನಡೇಸಿದ ಯಜ್ಞಕ್ಕೆ ತನ್ನ ಪತಿ ಈಶ್ವರನನ್ನು ಆ ಮಂತ್ರಿಸಲಿಲ್ಲವೆಂಬ ಕಾರಣಕ್ಕಾಗಿ ದಕ್ಷಾಯಿಣಿಯು ತನ್ನನ್ನು ಅಗ್ನಿ ದೇವನಿಗೆ ಸಮರ್ಪಿಸಿ ಕೊಳ್ಳುತ್ತಾಳೆ. ಅವಳನ್ನು ಬೆಂಕಿಯಿಂದ ರಕ್ಷಿಸಿದಾಗ ಅವಳ ಇಡೀ ದೇಹದ ವೈಬಣ್ಣ ಹೇಮ(ಸ್ವರ್ಣ)ಕ್ಕೆ ತಿರುಗುತ್ತದೆ ತಾನು ಮಾಡಿದ ತಪ್ಪಿನ ಸಲುವಾಗಿ ಈಶ್ವರನು ಪ್ರಾರ್ಥಿಸಿಕೊಂಡಾಗ ದಾಕ್ಷಯಿಣಿ ಹಿಮವಂತನ ಮಗಳಾಗಿ ಹಿಟ್ಟಿ ಈಶ್ವರನ್ನು ಹೋಂದಲು ತಪಸ್ಸು ಮಾಡಿದಳು ಈಶ್ವರ ಅವಳ ಮುಂದೆ ಪ್ರತ್ಯಕ್ಷವಾಗಿ ವಿಶ್ವದ ಉನ್ನತಿಗಾಗಿ ನೀನು ನದಿಯಾಗಿ ಹರಿದು ಜಗತ್ ಕಲ್ಯಾಣವನ್ನು ಸಾಧಿಸುಎಂದು ಹರುಸುತ್ತಾನೆ.
ಮತ್ತೊಂದು ಕಥೆಯ ಪ್ರಕಾರ ಆಲೂರು ತಾಲ್ಲೂಕಿನ ಪೊನ್ನಾಥಪುರ ಗ್ರಾಮವನ್ನು (ಈ ಗ್ರಾಮವೀಗ ಹೇಮಾವತಿ ಜಲಾಸಯದ ಹಿನ್ನಿರಿನಲ್ಲಿ ಮುಳುಗಿದೆ) ಆಳುತ್ತಿದ್ದ ಪೊನ್ನ ಎಂಬ ಪಾಳೆಗಾರನಿಗೆ ಹೇಮಾವತಿ ಮತ್ತು ಹೊನ್ನಿ (ಕಪಿಲಾ) ಎಂಬ ಇಬ್ಬರು ಅಕ್ಕ ತಂಗಿಯರು ಪೊನ್ನನಿಗೆ ಪತ್ನಿಯರಾಗಿದ್ದಂತೆ. ಇವರಿಗೆ ಎಷ್ಟು ಕಾಲವಾದರೂ ಒಂದು ಸಹ ಸಂತಾನವಿಲ್ಲದ ಕಾರಣ ಮನೆ ಮಠ ತೊರೆದು ಪೊನ್ನ ಪತ್ನಿಯರೊಡನೆ ರಾಮನಾಥಪುರಕ್ಕೆ ಬಂದು ಪುಷ್ಕರಣಿಯಲ್ಲಿ ಜಳಕ ಮಾಡಿ ಭರಧ್ವಾಜನೆಂಬ ಮಹರ್ಷಿಗೆ ಶರಣಾಗುತ್ತಾನೆ. ಇದಾದ ನಂತರ ಹಿರಿಯ ಹೆಂಡತಿ ಹೇವಾ ನದಿಯಾಗಿ ಹರಿದು ಲೋಕೋಪಕಾರ ಮಾಡುತ್ತ ಕಾವೇರಿಯನ್ನು ಸೇರಿ ಕೃತಾರ್ಥಳಾದಳು. ಕಪಿಳೆ ರಾಮನಾಥಪುರದ ಶಿಲೆಯಾಗಿ ತಪಸ್ಸನ್ನಾಚರಿಸುವವರಿಗೆ ಶೀಘ್ರಪಲದಾಯಕಳಾದಳು.
ಹೀಗೆ ಆನೇಕ ಹೇಮಾವತಿ ನದಿಯ ಹುಟ್ಟಿಗೆ ಕಾರಣವಾದ ಕಥೆಗಳು ಹುಟ್ಟಿವೆ. ಹೇಮಾವತಿ ನದಿಯ ಉಪಕಣಿವೆಗಳು ಹೇಮಾವತಿ ಜಯಪಾರ್ವತಿ, ಐಗೂರಹಳ್ಳಿ, ಉಚ್ಚಂಗಿಹೊಳೆ, ಚಿಟ್ನಿಹಳ್ಳ, ಬಿಲಹಳ್ಳಿ, ವೇದಾವತಿಹಳ್ಳ, ವಾಟೆಹೊಳೆ, ಸಗರಿಹಳ್ಳ.

ಅಣೆಕಟ್ಟ ತುಂಬ ನೆತ್ತಿ ಬಾಗಿಲುಗಳನ್ನು ಎತ್ತಿ ನೀರು ಹೊರ ಬಿಟ್ಟಾಗ 35 ಅಡಿ ಎತ್ತರದಿಂದ ಧುಮುಕುವ ನೀರಿನ ಜಲಧಾರೆ ಮುಂಭಾಗದ ಬಕೇಟ್ಗೆ ಬಡಿದು ಎತ್ತರಕ್ಕೆ ಚಿಮ್ಮುವ ದೃಶ್ಯ ಅದ್ಭುತವಾದ ರಾಸ ನಿಮಿಷವಾಗಿದೆ. 1200 ಅಡಿ ಹೃದಯ ಗಟ್ಟಿಯಾಗಿರಿಸಿ ಒಂದು ತುದಿಯಿಂದ ಇನ್ನೊಂದು ತುದಿಗೆ ದಾಟಬಹುದಾಗಿದೆ. ಅಣೆಕಟ್ಟೆಯ ಮೇಲೆ ನಿಂತು ನೋಡಿದರೆ ತುಂಬಿದ ಜಲಧಾರೆ ವಿಶಾಲ ಸಮುದ್ರದಂತೆ ಕಾಣುವ ಜಲಾಶಯದ ನಿಂತ ನೀರಿನ ಮೇಲಿನಿಂದ ಬೀಸುವ ಶೀತಲ ತಂಗಾಳಿ ಚಳಿಯ ಅನುಬವ ನೋಡುಗರ ಮನಸ್ಸನ್ನು ಮುದಗೊಳಿಸುತ್ತದೆ.
ಹೇಮಾವತಿ ಜಲಾಶಯ ನಿರ್ಮಣವಾದ ನಂತರ ಈವರೆಗೆ ಭರ್ತಿಗೊಂಡ ದಿನಗಳು ಇಂತಿದೆ.
1983 ನವೆಂಬರ್ 7
1984 ಸೆಪ್ಟೆಂಬರ್ 4
1988 ಸೆಪ್ಟೆಂಬರ್ 30
1989 ಸೆಪ್ಟೆಂಬರ್ 1
1990 ಸೆಪ್ಟೆಂಬರ್ 3

1992 ಸೆಪ್ಟೆಂಬರ್ 17
1993 ಆಗಸ್ಟ್ 24
1994 ಅಕ್ಟೋಬರ್ 6
1995 ಅಕ್ಟೋಬರ್ 10
1996 ಸೆಪ್ಟೆಂಬರ್ 1
1997 ಆಗಸ್ಟ್ 26
1998 ಅಕ್ಟೋಬರ್ 16
1999 ಆಗಸ್ಟ್ 20
2000 ಅಕ್ಟೋಬರ್ 16
2005 ಆಗಸ್ಟ್ 30
2006 ಸೆಪ್ಟೆಂಬರ್ 24
2007 ಸೆಪ್ಟೆಂಬರ್ 27
2008 ಸೆಪ್ಟೆಂಬರ್ 21
2009 ಸೆಪ್ಟೆಂಬರ್ 23
2010 ನವೆಂಬರ್ 22
2011 ಸೆಪ್ಟೆಂಬರ್ 17
2013 ಜುಲೈ 25
ಹೇಮಾವತಿ ಜಲಾಶಯದ ಎಡದಂಡೆ ನಾಲೆಯನ್ನು ಶ್ರೀ ಎ.ಜಿ.ರಾಮಚಂದ್ರರಾವ್ ನಾಲೆವೆಂದು ಕರೆಯಲಾಗುತ್ತದೆ. ಎಡದಂಡೆ ನಾಲೆ 233 ಕಿ.ಮೀ ಉದ್ದವಾಗಿದ್ದು 245000 ಎಕರೆ ಪ್ರದೇಶಕ್ಕೆ ನೀರಾವರಿ ಒಳಪಡಿಸುತ್ತದೆ. ಈ ನಾಲೆಯು ಏಷ್ಯದ 2ನೇ ಅತಿ ದೊಡ್ಡ ಬಾಗೂರು ನವಿಲೆ ಸುಂರಗದ ಮೂಲಕ ಹಾದಿ 240ಲಿ.ಮೀ ಉದ್ದವಿರುವ ತುಮಾಕುರಿನ ಉಪನಾಲೆ (ಸುಬ್ರಮಣ್ಯ ನಾಲೆ) 238000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ವದಗಿಸಿದೆ. 71ಕಿ.ಮೀ ಉದ್ದದ ನಾಗಮಂಗಲ ಉಪನಾಲೆ (ಟಿ.ಮರಿಯಪ್ಪ ನಾಲೆ)ಯಿಂದ 147000 ಎಕರೆ ಪ್ರದೇಶಕ್ಕೆ ನೀರಾವರಿಗೆ ಒಳಪಡಿಸಲು ಯೋಜಿಸಲಾಗಿದೆ.
ಇನ್ನೂ ಬಲದಂಡೆ ನಾಲೆಯನ್ನು ಡಾ|| ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಾಲೆವೆಂದು ಕರೆಯುತ್ತಾರೆ. ಈ ನಾಲೆಯು 91 ಕಿ.ಮಿ ಉದ್ದವಿದೆ. ಇದರ ಸಾಮಥ್ರ್ಯ ಪ್ರತಿ ಸೆಕೆಂದಿಗೆ 1000 ಘ.ಮಿ ಈ ನಾಲೆಯು 20000 ಎಕರೆಗಳಲ್ಲಿಗೆ ನೀರು ಬದಗಿಸಲಾಗುತ್ತಿದೆ. ಹೇಮಾವತಿ ಬಲಮೇಲ್ದಂಡೆ ನಾಲೆಯನ್ನು ಬೋರಣ್ಣಗೌಡ ನಾಲೆವೆಂದು ಕಾರೆಯಲಾಗಿದ್ದು ಈ ನಾಲೆಯು 106 ಕಿ.ಮೀ ಉದ್ದವಿದೆ. ಈ ನಾಲೆಯು ಅಣೆಕಟ್ಟೆಯ ಜಲಾವೃತ್ತ ಪ್ರದೇಶ ಬಲಭಾಗದಲ್ಲಿ ಪ್ರಾಂಭವಾಗಿ 3 ಕಿ.ಮೀ ಸುರಂಗ ಮಾರ್ಗವಾಗಿ ಹರಿದು ಮುಂದೆ ಸಾಗುತ್ತದೆ. ಈ ನಾಲೆಗೆ ಹಳ್ಳಿ ಮೈಸೂರು ಏತ ನೀರಾವರಿ ಯೋಜನೆಗೆ ನೀರನ್ನು ಒದಗಿಸಲಾಗುತ್ತದೆ.
ಯೋಗಾನರಸಿಂಹಸ್ವಾಮಿ ದೇವಾಲಯ:-

ಗರ್ಭಗುಡಿ, ನವರಂಗ, ಸುಖನಾಸಿಯಿಂದ ಕೂಡಿದ ಯೋಗನರಸಿಂಹ ದೇವಾಲಯವು ಗರ್ಭಗುಡಿಯ ಮೂಲ ವಿಗ್ರಹ ಮೂಡಿದಾಗಿರುವುದರಿಂದ ಗರ್ಭಗುಡಿಯ ನಿಲುಬಾಗಿಲು ದೇವರಿಗಿಂತ ಎತ್ತರದಲ್ಲಿ ಕಡಿಮೆ ಇದೆ. ನರಸಿಂಹನು ಎರಡು ಕೈಗಳನ್ನೂ ಮಂಡಿಯ ಮೇಲಿದ್ದು ಒಂದು ಕೈಯಲ್ಲಿ ಶಂಖ ಇನ್ನೊಂದರಲ್ಲಿ ಚಕ್ರ ಹಿಡಿದ್ದಿದ್ದು ಪೀಠದ ಮೇಲೆ ಗರುಡನ ವಿಗ್ರಹವಿದೆ. ಗರ್ಭಗುಡಿಯ ದ್ವಾರದಲ್ಲಿ ಜಯವಿಜಯ ವಿಗ್ರಹವಿದ್ದು ಒಲಗಡೆ ಮಧುರಕವಿ ಆಳ್ವಾರ್ ಮತ್ತು ಪಾಂಡರಪ್ಪಡಿ ಆಳ್ವಾರ್ ವಿಗ್ರಹವಿದೆ. ಎಡಗಡೆ ಲಕ್ಷ್ಮಿನರಸಿಂಹ, ಪ್ರಹ್ಲಾದ ರಾಮಸೀರೆ ಆಂಜನೇಯವಿದೆ.
ದೇವಾಲಯದ ಗೋಪುರವು ಮೂರು ಆಂತಸ್ತಿನದಾಗಿದ್ದು ಅಲ್ಲಲ್ಲಿ ನೃತ್ಯ ಭಂಗಿಯಲ್ಲಿರುವ ದೇವ ಕನ್ಯೆಯರು, ಗಂಧರ್ವರು, ಆಂಜನೆಯ, ಗರುಡ ಇತ್ಯಾದಿ ಮೂರ್ತಿಗಳನ್ನು ರೂಪಿಸಲಾಗಿದೆ. ಗೋಪುರದ ಮೇಲಿರುವ ಐದು ಕಳಸಗಳ ಎರಡು ತುದಿಯಲ್ಲಿ ರಕ್ಷಸರೂಪದ ಚಿನ್ನೆಗಳಿವೆ. ಮಹಾಧ್ವಾರದ ಮುಂಭಾಗದಲ್ಲಿರುವ ಗೋಪುರವನ್ನು ಗೋಕರ್ಣ ಋಷಿ ಮಂಟಪವೆಂದು ಕರೆಯಲಾಗಿದೆ. ದೇವಸ್ಥಾನದ ಮುಂದೆ ಗೋಕರ್ಣ ಋಷಿ ಎಡಬದಿಗೆ ವಿಧ್ಯಾಸರಸ್ವತಿ ಒಲಗಡೆ ನಾರದ ಹಿಂಭಾಗದಲ್ಲಿ ಉಗ್ರನರಸಿಂಹ ಶಿಲ್ಪ ಹಾಗೂ ನಾಲ್ಕು ತುದಿಯಲ್ಲಿ ಆಚಿಜನೇಯ, ಗರುಡ ಮತ್ತು ನಾರಾಯಣ ಮೂರ್ತಿಗಳಿವೆ.
ಪಾಳೆಗಾರ ಕೃಷ್ಣಪ್ಪನಾಯಕನು ಶ್ರೀ ಯೋಗನರಸಿಂಹಸ್ವಾಮಿ ವಿಗ್ರಹವನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ, ಗರ್ಭಗುಡಿಯನ್ನು ಮತ್ತು ಸುತ್ತ ಕಲ್ಲುಗೋಡೆಯನ್ನು ನಿರ್ಮಿಸಿದ ನಂತರ ಮುಂದೆ ದೊಡ್ಡನರಸಯ್ಯ ಮತ್ತು ಅವರ ವಂಶೀಕರು ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿದರೆಂದು ಹೇಳಲಾಗಿದೆ. ಗೊರೂರಲ್ಲಿ ಮಾಘಮಾಸ ಹುಟ್ಟಿತೆಂದರೆ ಊರಿನ ಮನೆಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದು ಹಬ್ಬವೆಂಬ ಭಾವನೆ ಮೂಡುತ್ತದೆ. ರಥೋತ್ಸವಕ್ಕೆ ಒಂದು ವಾರದ ಮುಂಚೆ ದನಗಳ ಜಾತ್ರೆ ಸೇರುತ್ತರೆ.ಮಾಘ ಶುದ್ಧ ಮೊದಲನೆಯ ದಿನದಲ್ಲಿಯೆ ಊರಿನ ಪರವಾಸು ದೇವಸ್ಥಾನದಲ್ಲಿ ಸಮಾರಾಧನೆ ಪ್ರಾರಂಭವಾಗುತ್ತದೆ. ತೇರಿನ ಎತ್ತರಕ್ಕೆ ಸಮವಾಗಿ ಕಲ್ಲು ಮಂಟಪವನ್ನು ನಿರ್ಮಿಸಲಾಗಿದೆ. ಇಲ್ಲಿಯ ವೈಶಿಷ್ಟ್ಯವೆಂದರೆ ಪಂಚಮರು ಬಂದು ಕೈ ಹಾಕುವವರೆಗೆ ತೇರನ್ನು ಎಳೆಯಲಾಗುವುದಿಲ್ಲ.
ತೇರಿಗಹೋಗೋಣ ಬನ್ನಿರೇ
ಸ್ವಾಮಿ ರಥಾಕೋಗೋಣ ಬನ್ನಿರೇ |
ನೋಡಾಕೆ ಚೆಂದ್ಹಂತೆ ನೊಣವಿನ ಕರೆಯಂತೆ
ಕೋಟೆಯ ಬುಡದ ಬೇಟರಾಯ್ನಂತೆ ||
ಅಯ್ಗೊಳ ಗುಡಿಯಲ್ಲಿ ಏನೇನು ಅಡ್ಗೆ
ಊಟ ಮತ್ತೆ ಪನಿವಾರ |
ನೆನೆಯಕ್ಕಿ ನೆನೆಗಡಲೆ ಪನಿವಾರಾ
ನಮ್ಮ ಮುದ್ದು ನರಸಿಂಹನ ಗುಡಿಯಾಗೆ ||
ಹಾರುವರ ಕೇರಿಯ ತೇಗದ ತೇರು
ಯಾರ್ಯಾರಯ ನೊಕಿದ್ರು ಮಲಕೊಲ್ದು |
ಯಾರ್ಯಾರು ನೂಕಿದ್ರು ಮಲಕದ ತೇರು
ಗೊರವೂರ ಹೊಲೆಯರು ಮುಟ್ಟಿದ್ರೆ ನಲಿಯುವೆ ||
ಪಂಚಮರು ನಲಿಯುತ್ತು ಕುಣಿಯುತ್ತ ತೇರನ್ನು ಎಳೆಯುತ್ತಾರೆ.
ಪರವಾಸು ದೇವಾಲಯ:-

ತ್ರಿಕೂಟಲಿಂಗೇಶ್ವರ ಮತ್ತು ಕೈಲಾಸೇಶ್ವರ ದೇವಾಲಯ:-

ತ್ರಿಕೂಟಲಿಂಗೇಶ್ವರ ದೇವಾಲಯದಲ್ಲಿ ಒಟ್ಟು ಐದು ಶಾಸನಗಳಿವೆ. ಇದರಲ್ಲಿ ದೇವಾಲಯದ ಒಳವಾಗಿಲ ಬಳಿ ದಕ್ಷಿಣ ಕಡೆ ಇರುವ ಕಂಬದ ಮೇಲಿನ ಶಾಸನವನ್ನು ದೇವಾಲಯದ ಪ್ರತಿಷ್ಠಪನೆಯ ದಿನದಂದು ಬರೆಸಾಲಗಿದೆ. ದೇವಸ್ಥಾನ ಪ್ರತಿಷ್ಠಪಣೆ ದಿನಾಂಕ 1197ರ ಮಾರ್ಚ್ 2ಎಂದಿದೆ. ಈ ಶಾಸನ ಹೊಯ್ಸಳರ ಒಂದನೇ ನರಸಿಂಹ ಕಾಲದಲ್ಲಿ ಹಳೇಬಿಡು ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ ಮಾಡುತ್ತಿರುವಾಗ್ಗೆ ಇವರ ಆಶ್ರಿತನಾದ ವಿಜಯಾದಿತ್ಯ ಹೆಗ್ಗಡೆ ಶತರುದ್ರಯಾಗಪುರಿ ಗೊರೂವೂರಿನಲ್ಲಿ ತ್ರಿಕೂಟಲಿಂಗವನ್ನು ಸ್ಥಾಪಿಸಿ ಈ ದೇವಾಲಯಕ್ಕೆ ಮಾವಿನ ಕೆರೆಯಲ್ಲಿ ಭೂಮಿಯನ್ನು ಬಿಟ್ಟನೆಂದು ಹೇಳಿದೆ.
ತ್ರಿಕೂಟಲಿಂಗೇಶ್ವರ ದೇವಾಲಯದ ಪಕ್ಕದಲ್ಲಿರುವ ಕೈಲಾಸೇಶ್ವರ ದೇವಾಲಯದ ಕಲೆ ತ್ರೀಕೂಟಲಿಂಗೇಶ್ವರ ದೇವಾಲಯದ ಕಲೆಗಿಂತ ಹಿರಿದು. ಕೈಲಾಸೇಶ್ವರ ಲಿಂಗದ ಮುಂದೆ ಸುಕನಾಸಿಯಲ್ಲಿ ಪಾರ್ವತಿ ಪರವೇಶ್ವರ ಜೋತೆ ಗಣಪತಿ ಚನ್ನಕೇಶವ ಸುಬ್ರಮಣ್ಯ ಸ್ವಾಮಿ ನಾರಾಯಣ ಸ್ವಾಮಿ ವಿಗ್ರಹಗಳಿವೆ. ಜಕಣಾಚಾರಿ ಮತ್ತು ಸಂಗಡಿಗರ ಮಾದರಿಯ ತೊಂಬತ್ತು ದೇವಾಲಯಗಳಿವೆ ಆ ಪೈಕಿ ಗೊರೂರಿನ ಈ ದೇವಾಲಯ ಸಹ ಒಂದಾಗಿದೆ. ಈ ದೇವಾಲಯವು ಗರ್ಭಗುಡಿ, ಸುಕನಾಸಿ ಮತ್ತು ನವರಂಗದಿಂದ ಕೂಡಿದೆ. ಪ್ರತಿ ಸೋಮವಾರ ಈ ದೇವಸ್ಥಾನದಲ್ಲಿ ರುದ್ರಾಭಿಷೇಕ ಇದ್ದು ಶಿವರಾತ್ರಿ ಗೌರಿ ಹಬ್ಬ ಮತ್ತು ಕಾರ್ತಿಕ ಮಾಸದ ಒಂದು ತಿಂಗಳು ದೀಪಾರಾಧನೆ ಇರುತ್ತದೆ.
ಸಂಗಮೇಶ್ವರ ದೇವಾಲಯ:-
ಹೇಮಾವತಿ ಯಗಚಿ ನದಿ ಸಂಗಮವಾಗುವ ಸ್ಥಳದಲ್ಲಿ ಸಂಗಮೇಶ್ವರ ದೇವಾಲಯವಿದೆ. ಈ ದೇವಾಲಯವು ಪೊನ್ನಾಥಪುರದಲ್ಲಿದ್ದು ಲಕ್ಷ್ಮಿನರಸಿಂಹ ದೇವರುಗಳ ಮೂಲವಿಗ್ರಹವನ್ನು ತಂದು ಸಂಗಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ಸಂಗಮೇಶ್ವರ ಲಿಂಗರೂಪಿಯಾಗಿದ್ದು ಇದರ ಪಕ್ಕದಲ್ಲಿ ನರಸಿಂಹವನ್ನು ಪ್ರತಿಷ್ಠಾಪಿಸಿದ್ದಾರಿಂದ ಈ ದೇವಾಲಯವನ್ನು ಹರಿಹರೇಶ್ವರ ದೇವಾಲಯವೆಂದು ಸಹ ಕರೆಯುತ್ತರೆ. ಗೊರೂರಿನಲ್ಲಿ ಅಯ್ಯಪ್ಪಸ್ವಾಮಿ ವೀರಾಂಜನೇಯ ಮಾರಿಕಾಂಬ ದೇವಾಲಯಗಳು ಇವೆ.
ಇಲ್ಲಿಯ ಕೈಲಾಸೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಿಂದೆ ರಕ್ಷಣಾ ಕೋಟೆ ಇತ್ತು ಅದರ ಅವಶೇಷದ ತುಣುಕುಗಳನ್ನು ನಾವು ನೋಡಬಹುದಾಗಿದೆ. ಇಲ್ಲಿಯ ಕೋಟೆಯ ಇತಿಹಾಸ ತಿಳಿಯಬರಲಿಲ್ಲವಾದರೂ 11ನೇ ಶತಮಾನದಿಂದ 14ನೇ ಶತಮಾನದವರೆಗೂ ಹೊಯ್ಸಳ ಸಾಮಂತರಿಗೆ ನಂತರದಲ್ಲಿ ವಿಜಯನಗರದರಸರ ಅಧಿನದಲ್ಲಿತ್ತು. 1166ರಲ್ಲಿ ವಿಜಯಾಧಿತ್ಯನ ಶಾಸನ 1314ರ ವೀರಬಲ್ಲಾಳನ ಶಾಸನ 1239ರ ಮಾಚಯದತ ನಾಯಕನ ಶಾಸನಗಳಿಂದ ಅರ್ಥವಾಗುತ್ತದೆ. ಮುಂದೆ 1575ರಲ್ಲಿ ಬೇಲೂರಿನ ಅಂದರೆ ವಿಜಯನಗರ ಸಾಮಂತನಾದ ಅರಕಲಗೂಡು ಕೃಷ್ಣಪ್ಪನಾಯಕನ ಅಧೀನಕ್ಕೆ ಒಳಪಟ್ಟಿತ್ತಲ್ಲದೇ ಕ್ರಿ.ಸ 1780ರ ಮಡಿಕೇರಿ ಅರಸರ ಅಧಿಕಾರಕ್ಕೊಳಪಟ್ಟ ಕೇಂದ್ರವಾಗಿತ್ತು. ಆ ಸಾಮಯಲದಲ್ಲಿ ಮಹಾರಾಜದುರ್ಗವನ್ನು ಆಳಿದನಾಯಕರ ಆಡಳಿತ ಕೇಂದ್ರವಾಗಿತ್ತು. ಲಿಂಗರಾಜ ಬಡೆಯರು ಕೊಡಗಿನ ಅರಸನನ್ನು ಇಲ್ಲಿ ಬಂಧಿಸಿ ಇಟ್ಟಿದ್ದರೆಂಬ ಐತಿಹ್ಯದಿಂದ ಇಲ್ಲಿ ಪ್ರಬಲವಾದ ರಾಜಕೀಯ ಕೇಂದ್ರವಿದ್ದಿರಬಹುದೆಂದು ಭಾವಿಸಬಹುದಾಗಿದೆ. ನಂತರ 1782ರಲ್ಲಿ ಹೈದರಾಲಿಯ ಮಗ ಟಿಪ್ಪುಸುಲ್ತಾನ್ ಗೊರೂರು ಕೋಟೆಯಿಂದ ಮಡಿಕೇರಿ ರಾಜಕುಟುಂಬವನ್ನು ಪರಿಯಪಟ್ಟಣಕ್ಕೆ ವರ್ಗಯಿಸಿದನೆಂದೂ ತಿಳಿದುಬರುತ್ತದೆ.
-ದ್ಯಾವನೂರು ಮಂಜುನಾಥ್
No comments:
Post a Comment